Wednesday, 11 February 2015

೨ ಹಿಂಗಾರಿನ ಬಂಗಾರದ ಹೂಗಳು

 ತಡವಾಗಿ ಬಂದವರಿಗಾಗಿ - ಟೋನಿ ಗೋರ್ಕಲ್ಲಿಗೆ ಬಂದಿಳಿದಾಗ ಮಧ್ಯರಾತ್ರಿ. ರಾತ್ರಿಯನ್ನು ಗೆಸ್ಟ್ ಹೌಸ್ನಲ್ಲಿ ಕಳೆದು ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಗೋರ್ಕಲ್ಲ ಕಡೆ ಒಂಟಿಯಾಗಿ ಹೊರಡುತ್ತಾನೆ ಟೋನಿ.

--- ೨. ಹಿಂಗಾರಿನ ಬಂಗಾರದ ಹೂಗಳು

ಟೋನಿ ಗೋರ್ಕಲ್ಲ ಬಳಿ ತಲುಪಿದಾಗ ಕೈ ಗಡಿಯಾರ ಹನ್ನೊಂದು ಗಂಟೆ ತೋರಿಸುತ್ತಿತ್ತು .
ಸೂರ್ಯ ನೆತ್ತಿಯ ಮೇಲೆ ಬರಲು ಹವಣಿಸುತ್ತಿತ್ತು. ಆಗಸದಲ್ಲಿ ತೇಲುವ ಮೋಡಗಳು ನೆರಳನ್ನು ಭೂಮಿಗೆ ನೀಡಿ ವಂದಿಸುತ್ತಿವೆಯೋ ಎನ್ನುವಂತಿತ್ತು. ಯಾಕೋ ಏನೋ, ಗಾಳಿ ಮಾತ್ರ ಸುಸ್ತಾಗಿ ಅಲುಗಾಡದೇ ಎಲ್ಲೋ ಮಲಗಿದ್ದಂತ್ತಿತ್ತು. ಸುತ್ತಲೂ ಭಯಂಕರವಾಗಿ ಬೆಳೆದ ಮರಗಳು, ಗಿಡಗಂಟಿಗಳು, ಮಟ್ಟಿಗಳು, ತನಗಾಗಿ ಮಾಡಿದಂತಿರುವ ಕಾಲು ದಾರಿ.

ಎದುರಿಗೆ ಅಚಲವಾಗಿ ನಿಂತ ಗೋರ್ಕಲ್ಲು. ಪ್ರಕೃತಿಯ ಕೃತಿಯೇ ವಿಚಿತ್ರ. ವಿಸ್ಮಯ. ಸುಮಾರು ಮುನ್ನೂರು ಅಡಿ ಸುತ್ತಳತೆಯ, ಇನ್ನೂರು ಅಡಿ ಎತ್ತರದ ಗೋರ್ಕಲ್ಲು, ಆ ಅರಣ್ಯದ ನಡುವೆ ಒಬ್ಬಂಟಿಯಾಗಿ, ಮೌನವಾಗಿ ಕಲ್ಲಾಗಿ ನಿಂತಿತ್ತು. ಅದರ ಮಡಿಲಲ್ಲಿ ಅರಳಿದ ಬಂಗಾರದ ವರ್ಣದ ಹೂಗಳು.

ಏನಾಶ್ಚರ್ಯ! ಹುಡುಕಿದರೂ ಕಾಣದ ಚಿಟ್ಟೆಗಳು, ದುಂಬಿಗಳು. ಕಪ್ಪು ಕಲ್ಲಿನ ಕೆಳಗೆ ಆವರಿಸಿದ ಬಂಗಾರ ವರ್ಣದ ಹೂಗಳು, ಅದರ ಕೆಳಗೆ ಹಸಿರು ತುಂಬಿದ ಒಂದು ಅಡಿ ಎತ್ತರದ ಗಿಡಗಳು, ಅದರ ಕೆಳಗೆ, ಗೋರ್ಕಲ್ಲಿನಂತೆ ಕಪ್ಪಾದ ತೇವವಾದ ನೆಲ.

ಹಿಂದಿನಸಲ ಬಂದಾಗ ಒಂದೇ ಒಂದು ಹೂ ಬಿಟ್ಟಿರಲಿಲ್ಲ. ಆಗ ತಾನು ಬಂದಿರುವುದು ಈ ಹೂಗಳ ಸಲುವಾಗಿ ಅಲ್ಲವಲ್ಲ, ಎಂದುಕೊಂಡ ಟೋನಿ.

ಹೂಗಳನ್ನು ನೋಡಿದಾಗ, ಐದು ಕಿಲೋಮೀಟರು ಬಿರುಸಾಗಿ ನಡೆದ ಆಯಾಸ ಕಣ್ಮರೆಯಾಗಿತ್ತು. ಮಾಸ್ಕ ತೆಗೆದು, ಬ್ಯಾಗಿನಿಂದ ಕ್ಯಾಮೆರಾ ತೆಗೆದು ಫೋಟೋ ಕ್ಲಿಕ್ಕ್ಕಿಸಿದ ಮೇಲೆ, ಕೈಗೆ ಗ್ಲೌಸ್ ಹಾಕಿಕೊಂಡ ಟೋನಿ. ಅದಕ್ಕಾಗಿಯೇ ತಂದ ಗ್ಲಾಸಿನ ಕಂಟೇನರ್ನಲ್ಲಿ ಒಂದೊಂದೇ ಹೂಗಳನ್ನು ಇನ್ನಿಲ್ಲದ ತಾಳ್ಮೆಯಿಂದ ತುಂಬತೊಡಗಿದ ಟೋನಿ.

---

'ಅರೆ?! ಆ ಯಪ್ಪ ಕತ್ತಿ ಬುಟ್ಬುಟ್ಟು ಹ್ವೋಗೈತೆ!' ಎನ್ನುತ್ತಾ ರಾಮಣ್ಣ ಅಲ್ಲಿದ್ದ ಕತ್ತಿ ತೆಗೆದುಕೊಂಡ. ಕೆಲವು ಕ್ಷಣ ಆವನ ಮೆದುಳು ಬ್ಲಾಂಕ್ ಆಗಿತ್ತು. ಕಾಡು ಪ್ರಾಣಿಗಳು ಗೋರ್ಕಲ್ಲ ಬಳಿ ಸುಳಿಯಲ್ಲ ಎಂದು ರಾಮಣ್ಣನಿಗೆ ಗೊತ್ತಿತ್ತು. ಆದರೂ ಸಹಾಯಕ್ಕೆ ಬರುತ್ತೆ ಎಂದು ಹರಿತ ಮಾಡಿದ್ದ ಕತ್ತಿ ಕೊಟ್ಟಿದ್ದ. ಈವಾಗ ಕೊಟ್ಟು ಬರೋದೋ, ಬ್ಯಾಡವೋ?
ಐದು ಕಿಲೋಮೀಟರ್ ಹೋಗೋದರೊಳಗೆ ಆ ಯಪ್ಪಾ ಅಲ್ಲಿಂದ ಹೊರಟುಬಿಡ್ತಾರೆ. ಅಡಿಗೆ ಬೇರೆ ಮಾಡ್ಬೇಕು, ಎಂದು ಕತ್ತಿಯನ್ನು ಪಕ್ಕಕ್ಕೆ ಇಟ್ಟ ರಾಮಣ್ಣ, ತನ್ನ ಕೆಲಸದಲ್ಲಿ ಮಗ್ನನಾದ.

---

ಒಂದೊಂದು ಹೂಗಳು ಬಂಗಾರದ ಲೇಪನದಂತೆ ಕಂಗೊಳಿಸುತ್ತಿತ್ತು. ನಾಲಕ್ಕು ದಳಗಳು, ಅಂಚಿನಲ್ಲಿ ಕಂದು ಬಣ್ಣ ತಾಗಿಸಿದಂತಿತ್ತು.  ಚಂದ್ರು, ಹೂವಿನ ಫೋಟೋ ತೋರಿಸಿದಾಗ ಒಮ್ಮೆಯಾದರು ನೈಜವಾದ ಹೂವನ್ನು ನೋಡಬೇಕು ಅನಿಸಿತ್ತು. ಈಗ ಅವುಗಳ ನಡುವೆಯೇ ತಾನಿದ್ದೇನೆ!

ಒಂದೊಂದು ಹೂಗಳನ್ನು ಹೇಗೆ ಕೊಯ್ಯಬೇಕು, ಹೇಗೆ ಗ್ಲಾಸಿನಲ್ಲಿ ತುಂಬಬೇಕು ಎನ್ನುವುದನ್ನು ಚಂದ್ರು ಮತ್ತೆ ಮತ್ತೆ ಹೇಳಿದ್ದು ನೆನಪಾಯಿತು. ಹೂಗಳು ಗ್ಲಾಸಿನಲ್ಲಿ ಜಾಗ ಪಡೆದಂತೆ ಟೋನಿಯ ಹೃದಯದಲ್ಲೂ ಜಾಗ ಪಡೆದವು. ಗ್ಲಾಸ್ ಪೂರ್ತಿಯಾಗುವಸ್ಟರಲ್ಲಿ ಟೋನಿ, ಇಷ್ಟು ಚಂದದ ಹೂಗಳನ್ನು ಗಿಡದಿಂದ ಬೇರ್ಪಡಿಸಿದ್ದಕ್ಕಾಗಿ ನೊಂದ.

ಪಕ್ಕದಲ್ಲಿ ಸರಸರನೆ ಏನೋ ಶಬ್ದವಾಯಿತು. ಟೋನಿ ಬೆಚ್ಚಿದ!
ಹಾವು!
ಟೋನಿ ಮತ್ತೂ ಬೆಚ್ಚಿದ!
ಎರಡು ಹಾವು!

ಎರಡು ಕಪ್ಪು ಬಂಗಾರ ಮಿಶ್ರಿತ ಪಟ್ಟೆಗಳುಳ್ಳ ಹಾವುಗಳು! ಸುಂದರವಾದ, ಅಸ್ಟೇ ಭಯಂಕರವಾದ ಕಾಳಿಂಗ ಸರ್ಪಗಳು! ಒಂದು ಹೆಜ್ಜೆ ಹಿಂದಕಿಟ್ಟ ಟೋನಿಯನ್ನು ಹಿಂದಿನಿಂದ ಯಾರೋ ತಡೆದರು.

ಆ ಕ್ಷಣ ಟೋನಿಯ ಉಸಿರು ನಿಂತಿತ್ತು!

ಆ ವ್ಯಕ್ತಿ, ತೋರು ಬೆರಳನ್ನು ತನ್ನ ಬಾಯಿಗಿಟ್ಟು ಸುಮ್ಮನಿರಲು ಸಂಜ್ಞೆ ಮಾಡಿದಾಗ, ಉಸಿರಾಡಿದ ಟೋನಿ. ಉಸಿರಾಟ ನಾರ್ಮಲ್ ಆಗೋ ಅಸ್ಟರಲ್ಲಿ ಆ ಸರ್ಪಗಳು ಕದಲುತ್ತ ದೂರ ಹೋದವು.

'ನೀವು ಯಾರು?', ನಿಷ್ಶಬ್ದವನ್ನು ಮುರಿದ ಟೋನಿ.
ಆ ವ್ಯಕ್ತಿ   ಹೇಳುತ್ತೇನೆ ಎಂದು ಸೂಚಿಸುತ್ತ ಸುಮ್ಮನಿರಲು ಹೇಳಿದ.

---

ತಲೆಯಲ್ಲಿ ನೀಟಾಗಿ ಬಾಚಿದ ಆಲ್ಮೋಸ್ಟ್ ಬಿಳಿಯಾದ ಕೂದಲು. ಅಗಲವಾದ ಹಣೆ. ಹಣೆಯ ಮದ್ಯ ಬಾಗದಲ್ಲಿ, ಸ್ವಲ್ಪ ಕೆಳಗಡೆ ಚಂದನ ಮಿಶ್ರಿತ ಗಂಧ. ತೀಕ್ಷ್ಣವಾದ ಕಣ್ಣುಗಳು. ಕಣ್ಣುಗಳ ನಡುವೆ ಜೋಡಿಸಿಟ್ಟ ಹಾಗೆ ಇರುವ ನೀಟಾದ ಮೂಗು. ಮೂಗಿನ
ಕೆಳಗೆ ಬಿಲ್ಲಿನ ಆಕಾರದಲ್ಲಿರುವ, ಬಿಳಿಯಾದ ಪೊದೆ ಮೀಸೆ. ಬಿಳಿ ವಸ್ತ್ರ ದರಿಸಿದ, ಆರು ಅಡಿ ಎತ್ತರದ, ಸುಮಾರು ೫೦ ರಿಂದ ೬೦ ವಯಸ್ಸಿನ ವ್ಯಕ್ತಿ.

ನೋಡಿದ ಕೂಡಲೇ ಪೂಜ್ಯ ಭಾವನೆ ತರುವಂತ  ವ್ಯಕ್ತಿಯನ್ನು ನೋಡುತ್ತಲೇ ಇದ್ದ ಟೋನಿ.

ಹಾವುಗಳು  ಸಂಪೂರ್ಣ ದೂರವಾದವೆಂದು ಖಚಿತಗೊಂಡಾಗ ಆ ವ್ಯಕ್ತಿ ಬಾಯ್ತೆರೆದ.

'ಶರ್ಮ, ಶರ್ಮ ಎಂದು ನನ್ನ ಹೆಸರು. ನೀವು?'

'ನಾನು ಜಗದೀಶ್. ಬೆಂಗಳೂರಿಂದ ಬಂದಿದ್ದೇನೆ. ಇದೋ. ಈ ಹೂಗಳನ್ನು ತೆಗೆದುಕೊಂಡು ಹೋಗಕ್ಕಾಗಿ!', ಎಂದು ಹೂಗಳತ್ತ ಕೈ ತೋರಿಸಿದ ಟೋನಿ.

---

ಟೋನಿ ಯಾರು? ಜಗದೀಶ್ ಯಾರು? ಈ ಶರ್ಮ ಯಾರು? ಆ ಚಂದ್ರು ಯಾರು? ಏನಿದು ಹೂಗಳ ಮಹತ್ವ? ರಾಜು ಯಾಕೆ ಈ ಬಾರಿ ಬರಲಿಲ್ಲ? ಮುಂದಿನ ಸಂಚಿಕೆಯಲ್ಲಿ - "೩. ಬಂಗಾರದ ಹೂಗಳ ಮರ್ಮ".






No comments:

Post a Comment